ಸಂಧಿ ಪ್ರಕರಣ
ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು
ಉದಾ:
ಗಾಣ + ಇಗ =ಗಾಣಿಗ
ಆಡು + ಇಸು =ಆಡಿಸು
ಹಸು + ಇನ =ಹಸುವಿನ
‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.
ಸಂಧಿಗಳ ವಿಧಗಳು 
ಕನ್ನಡ ಸಂಧಿಗಳು
1.ಲೋಪ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.
ಉದಾ:
ಹಣದಾಸೆ – ಹಣದ + ಆಸೆ “ಅ” ಕಾರಲೋಪ
ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ
ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ
ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ
ಗಮನಿಸಿರಿ:
ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು.
ಹಾಗೆ
ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವು
"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.
2.ಆಗಮ ಸಂಧಿ
ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”. ಆಗಮ ಸಂಧಿಯ ವಿಧಗಳು
ಯ -ಕಾರ ಆಗಮ ಸಂಧಿ
ವ-ಕಾರ ಆಗಮ ಸಂಧಿ
1.ಯ ಕಾರ ಆಗಮ ಸಂಧಿ ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.
ಉದಾ:
ಕೆರೆಯನ್ನು = ಕೆರೆ + ಅನ್ನು
ಕಾಯದೆ = ಕಾ + ಅದೆ
ಬೇಯಿಸಿದ = ಬೇ + ಇಸಿದ
ಕುರಿಯನ್ನು , ಮೀಯಲು , ಚಳಿಯಲ್ಲಿ
2.ವ ಕಾರ ಆಗಮ ಸಂಧಿ ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”. ಉದಾ:
ಮಗುವಿಗೆ =ಮಗು + ಇಗೆ
ಗುರುವನ್ನು = ಗುರು + ಅನ್ನು
ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,
3.ಆದೇಶ ಸಂಧಿ
ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.
ಕ – ಗ
ಚ – ಜ
ಟ – ಡ
ತ – ದ
ಪ – ಬ
ಉದಾ:
ಮಳೆಗಾಲ =ಮಳೆ +ಕಾಲ
ಕಂಬನಿ = ಕಣ್ + ಪನಿ
ಕೈದಪ್ಪು = ಕೈ + ತಪ್ಪು
ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,
ಪ್ರಕೃತಿ ಭಾವ ಸಂಧಿ
ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ . ಉದಾ: ಅಣ್ಣ ಓಡಿಬಾ = ಅಣ್ಣ + ಓಡಿಬಾ ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ? ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?
ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.
ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು. ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.
ಎರಡು ಸಂಸ್ಕೃತದ ಪದಗಳ ಸೇರಿಕೆ.
- · ಸಂಸ್ಕೃತ ಸಂಧಿಗಳ ವಿಧಗಳು
- · ಸಂಸ್ಕೃತ ಸ್ವರ ಸಂಧಿಗಳು
- · ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ಸ್ವರ ಸಂಧಿಗಳ ವಿಧಗಳು
- · ಸವರ್ಣ ದೀರ್ಘ ಸಂಧಿ
- · ಗುಣ ಸಂಧಿ
- · ವೃದ್ಧಿ ಸಂಧಿ
- · ಯಣ್ ಸಂಧಿ
1.ಸವರ್ಣ ದೀರ್ಘ ಸಂಧಿ ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು . ಅ-ಅ=ಆ , ಅ-ಆ=ಆ, ಇ-ಇ=ಈ , ಇ-ಈ=ಈ ಉ-ಉ=ಊ , ಉ-ಊ=ಊ
ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉದಾಹರಣೆಗೆ:
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉದಾ:
ಕೃ ತ + ಅ ರ್ಥ = ಕೃ ತಾ ರ್ಥ
( ಅ + ಅ = ಆ )
ಶ ಚಿ + ಇಂ ದ್ರ = ಶ ಚೀಂ ದ್ರ
( ಇ + ಇ = ಈ )
ಬ ಹು + ಉ ದ ಕ = ಬ ಹೂ ದ ಕ
( ಉ + ಉ = ಊ )
ವಿ ದ್ಯಾ + ಅ ಭ್ಯಾ ಸ = ವಿ ದ್ಯಾ ಭ್ಯಾ ಸ
( ಆ + ಅ = ಆ )
ಸ ತೀ + ಈ ಶ = ಸ ತೀ ಶ
( ಈ + ಈ = ಈ )
ಉ ಪ + ಆ ಹಾ ರ = ಉ ಪಾ ಹಾ ರ
( ಅ + ಆ = ಆ )
ದೇವಾಲಯ= ದೇವ + ಆಲಯ
ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ
ಗಿರೀಶ= ಗಿರಿ + ಈಶ
ಗುರೂಪದೇಶ= ಗುರು + ಉಪದೇಶ
ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.
2.ಗುಣ ಸಂಧಿ:  ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”
ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ
1. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
2. ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
3. ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾ:
ರಾ ಜ + ಇಂ ದ್ರ = ರಾ ಜೇಂ ದ್ರ
( ಅ + ಇ = ಏ )
ಜ ನ್ಮ + ಉ ತ್ಸ ವ = ಜ ನ್ಮೋ ತ್ಸ ವ
( ಅ + ಉ = ಓ )
ದೇ ವ + ಋ ಷಿ = ದೇ ವ ರ್ಷಿ
( ಅ + ಋ = ಅರ್)
ರ ಮಾ + ಈ ಶ = ರ ಮೇ ಶ
( ಆ + ಈ = ಏ )
ಮ ಹಾ + ಉ ತ್ಸ ವ = ಮ ಹೋ ತ್ಸ ವ
( ಆ + ಉ = ಓ )
ದೇವೇಂದ್ರ=ದೇವ + ಇಂದ್ರ
ಸಪ್ತರ್ಷಿ=ಸಪ್ತ + ಋಷಿ
ಸುರೇಂದ್ರ=ಸುರ + ಇಂದ್ರ
ಜನೋಪಕಾರ=ಜನ + ಉಪಕಾರ
ನಾಗೇಶ , ಏಕೋನ , ಚಂದ್ರೋದಯ ,ಉಮೇಶ
3.ವೃದ್ಧಿ ಸಂಧಿ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು. ಅ,ಆ-ಏ, ಐ=ಐಅ, ಆ-ಒ, ಓ=ಔ
ಉದಾ:
ಏಕೈಕ= ಏಕ + ಏಕ
ವನೌಷಧಿ=ವನ + ಔಷಧಿ
ಜನೈಕ್ಯ=ಜನ + ಐಕ್ಯ
ವನೌಷಧ , ಸಿದ್ಧೌಷದ , ಲೋಕೈಕವೀರ
ಲೋಕ + ಏಕವೀರ = ಲೋಕೈಕವೀರ
4.ಯಣ್ ಸಂಧಿ : ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು” ಇ,ಈ-ಅ,ಆ=’ಯ್’ ಉ,ಊ-ಅ,ಆ=’ವ್’ ಋ-ಅ,ಆ=’ರ್’
ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ
ಉದಾ:
ಪ್ರತ್ಯುತ್ತರ= ಪ್ರತಿ +ಉತ್ತರ
ಮನ್ವಂತರ= ಮನು +ಅಂತರ
ಜಾತ್ಯಾತೀತ=ಜಾತಿ +ಅತೀತ
ಮಾತ್ರಂಶ=ಮಾತೃ +ಅಂಶ
ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ
ಅತಿ + ಅಂತ = ಅತ್ಯಂತ
ಪಿತೃ + ಅರ್ಜಿತ = ಪಿತ್ರಾರ್ಜಿತ
ಪಿತೃ + ಅರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಕೂಟಿ + ಅಧೀಶ = ಕೋಟ್ಯಾಧೀಶ
ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
- ಜಶ್ತ್ವ ಸಂಧಿ
- ಶ್ಚುತ್ವ ಸಂಧಿ
- ಅನುನಾಸಿಕ ಸಂಧಿ
1.ಜಶ್ತ್ವ ಸಂಧಿ : ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”. ಉದಾ:
ವಾಗೀಶ=ವಾಕ್ + ಈಶ
ಅಜಂತ=ಅಚ್ + ಅಂತ
ಷೆಡಂಗ=ಷಟ್ +ಅಂಗ
ಸದ್ಭಾವ=ಸತ್ +ಭಾವ
ಅಜ್ಜ=ಅಪ್ + ಜ
ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ
2.ಶ್ಚುತ್ವ ಸಂಧಿ  ಶ್ಚು- ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.
·       
ಸ ಕಾರಕ್ಕೆ – ಶ ಕಾರವು
·       
ತ ವರ್ಗಕ್ಕೆ- ಚ ವರ್ಗವು (ಆದೇಶವಾಗಿ ಬರುತ್ತವೆ)
ಉದಾ:
ಸಜ್ಜನ=ಸತ್ +ಜನ
ಚಲಚಿತ್ರ= ಚಲತ್ + ಚಿತ್ರ
ಯಶಶ್ಯರೀರ=ಸರತ್ +ಚಂದ್ರ
ಜಗಜ್ಯೋತಿ, ಪಯಶ್ಯಯನ, ಶರಚ್ಚಂದ್ರ
3.ಅನುನಾಸಿಕ ಸಂಧಿ  ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”. ಉದಾ.
ವಾಙ್ಮಯ=ವಾಕ್ +ಮಯ
ಚಿನ್ಮೂರ್ತಿ= ಚಿತ್ + ಮೂರ್ತಿ
ತನ್ಮಯ= ತತ್+ಮಯ
ಸನ್ಮಾನ , ಅಮ್ಮಯ , ಸನ್ಮಣಿ ,ಚಿನ್ಮೂಲ ,
ಸಂಧಿಗಳು-ಅಭ್ಯಾಸ ಪ್ರಶ್ನೆಗಳು
೧. ಸಂಧಿ ಎಂದರೇನು?
೨. ದೇವರು + ಅಲ್ಲಿ,
ಊರು + ಊರು,
ಜಾತ್ರೆ + ಆಯಿತು,
ಗುರು + ಅನ್ನು,
ಹೊಲ + ಅನ್ನು
ಇದನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.
 
೩. ಯಕಾರಾಗಮ ವಕಾರಾಗಮ ಸಂಧಿಗಳು ಎಲ್ಲೆಲ್ಲಿ ಬರುತ್ತವೆ, ತಿಳಿಸಿರಿ.
೪. ಪಿತೃ + ಅನ್ನು, ಮಾತೃ + ಅನ್ನು, ಮನೆ + ಅನ್ನು, ಗಿರಿ + ಅನ್ನು, ಸಿರಿ + ಅನ್ನು  ಇವನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.  ಇಲ್ಲಿ ಲೋಪ ಮಾಡಿದ್ದರೆ ಹೇಗೆ ರೂಪಗಳಾಗುತ್ತಿದ್ದವು?
೫. ಅವನಲ್ಲಿ, ಊರನ್ನು, ದೇವರಲ್ಲಿ, ಮನೆಯಲ್ಲಿ, ಗುರುವನ್ನು, ಮಾತೃವನ್ನು, ಶತ್ರುವನ್ನು, ಮನವನ್ನು ಈ ಪದಗಳಲ್ಲಿರುವ ಸಂಧಿಗಳನ್ನು ಬಿಡಿಸಿ ಬರೆದು ಯಾವ ಯಾವ ಸಂಧಿಗಳೆಂಬುದನ್ನು ಹೆಸರಿಸಿರಿ.
೬. ಈ ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಶಬ್ದದಿಂದ ತುಂಬಿರಿ:-
(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ಗಳಿಗೆ ____________
(ii) ಮಳೆ + ______ = ಮಳೆಗಾಲ, ಇನಿದು + _______ = ಇಂಚರ
ನೀರ್ +
______ = ನೀರ್ವೊನಲ್,  
      ಬೇರ್ +
_______ = ಬೇರ್ವೆರಸಿ
(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ____________
(iv) ಸ್ವರದ ಮುಂದೆ ಸ್ವರ ಬಂದರೂ ಕೆಲವು ಕಡೆ ಲೋಪ, ಆಗಮ, ಆದೇಶಗಳು ಆಗುವುದಿಲ್ಲ.  ಇದಕ್ಕೆ ___________
(v) ಸ್ವರಕ್ಕೆ ಸ್ವರವು ಪರವಾದಾಗ ಅರ್ಥಕ್ಕೆ ಹಾನಿ ಬಾರದಿದ್ದರೆ __________ ಸ್ವರವು ಲೋಪವಾಗುವುದು.
(vi) _______  ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯಕಾರಾಗಮವಾಗುವುದು.
(vii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪಬಮ ಗಳಿಗೆ _______ ವು ಆದೇಶವಾಗಿ ಬರುವುದು.
(viii) ಭಾವಸೂಚಕಾವ್ಯಯಗಳ ಮುಂದೆ ಸ್ವರ ಬಂದರೆ __________
(ix) ಪ್ಲುತಕ್ಕೆ ಸ್ವರ ಪರವಾದರೆ ______________
೭. ಈ ಕೆಳಗಿನ ವಾಕ್ಯಗಳಲ್ಲಿ ದೋಷಗಳಿವೆ.  ಅವನ್ನು ತಿದ್ದಿ ಹೇಳಿರಿ:-
(i) ಪ್ಲುತಸ್ವರವೆಂದರೆ, ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರ.
(ii) ಆಗಮ ಸಂಧಿಯೆಂದರೆ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದು.
(iii) ವ್ಯಂಜನಗಳು ಅ ಕಾರದಿಂದ ಔ ಕಾರದವರೆಗೆ ಹದಿನಾಲ್ಕು.
(iv) ಒಂದು ವ್ಯಂಜನದ ಮುಂದೆ ಇನ್ನೊಂದು ವ್ಯಂಜನ ಬಂದಾಗ ಲೋಪಸಂಧಿಯಾಗುವುದು.
೮. ಈಕೆಳಗೆ ಬಿಟ್ಟಿರುವ ಸ್ಥಳಗಳ ಮುಂದೆ ಆವರಣದಲ್ಲಿ ಕೊಟ್ಟಿರುವ ಸರಿಯಾದ ಒಂದು ಉತ್ತರವನ್ನು ಆರಿಸಿ ಬರೆಯಿರಿ.
(i) ಊರೂರು=
(ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ)
(ii) ಮನೆ+ಅನ್ನು=(ಆಗಮ ಸಂಧಿ, ಆದೇಶಸಂಧಿ, ಲೋಪಸಂಧಿ)
(iii) ಅ ಶಬ್ದದ ಮುಂದೆ ಅಕಾರ ಪರವಾದರೆ (ಲೋಪಸಂಧಿ, ಆಗಮಸಂಧಿ, ಸಂಧಿಯಾಗುವುದಿಲ್ಲ)
(iv) ನಿಪಾತಾವ್ಯಯದ ಮುಂದೆ ಸ್ವರ ಬಂದರೆ ಎನಿಸುವುದು.
(ಪ್ರಕೃತಿಭಾವ, ಆಗಮ, ಆದೇಶ)
(v) ಇಕಾರಕ್ಕೆ ಸ್ವರ ಪರವಾದರೆ (ಯಕಾರಾಗಮ, ವಕಾರಾಗಮ, ಲೋಪವಾಗುವುದು)
(vi) ಸ್ವರಕ್ಕೆ ಸ್ವರ ಪರವಾದರೆ ಸ್ವರವು ಲೋಪವಾಗುವುದು.
(ಪೂರ್ವದ, ಮಧ್ಯದ, ಉತ್ತರದ)
(vii) ಪ್ಲುತಸ್ವರಕ್ಕೆ ಸ್ವರ ಪರವಾದರೆ  ಬರುವುದು.
(ಯಕಾರಾಗಮ, ವಕಾರಾಗಮ, ಪ್ರಕೃತಿಭಾವ)
(viii) ಪ್ಲುತಸ್ವರವೆಂದರೆ (ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ)
(ix) ಆದೇಶವೆಂದರೆ (ಒಂದು ಅಕ್ಷರದ ಸ್ಥಳದಲ್ಲಿ ಬರುವ ಬೇರೊಂದು ಅಕ್ಷರ, ಹೊಸದಾಗಿ ಬರುವ ಅಕ್ಷರ, ಇಲ್ಲದಂತಾಗುವ ಅಕ್ಷರ)
 
 
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ